110 ಕೆ.ವಿ. ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ : ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದ ಪರಿಣಾಮ : ಕಾಂಗ್ರೆಸ್ ಟೀಕೆ

0

ಸುಳ್ಯದ ೧೧೦ ಕೆ.ವಿ. ವಿದ್ಯುತ್ ಸಬ್ ಸ್ಟೇಶನ್ ಕಾಮಗಾರಿ ವಾರದೊಳಗೆ ಆರಂಭಿಸದಿದ್ದರೆ ಪ್ರತಿಭಟನೆ ಮಾಡುವುದಾಗಿ ಹೇಳಿರುವ ಬಿಜೆಪಿಯವರ ಹೇಳಿಕೆಯನ್ನು ನೋಡಿದಾಗ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದ ಆಗಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಟೀಕಿಸಿದೆ.
೧೧೦ ಕೆ.ವಿ. ಸಬ್‌ಸ್ಟೇಶನ್ ಬಗ್ಗೆ ೨೫ ವರ್ಷಗಳಿಂದ ಚುನಾವಣಾ ಸಂದರ್ಭದಲ್ಲಿ ಸುಳ್ಯದ ಜನತೆಗೆ ಬಿಜೆಪಿ ಭರವಸೆ ನೀಡುತ್ತಾ ಬಂದಿದ್ದು, ಕಳೆದ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಆಗಿನ ಇಂಧನ ಸಚಿವರಾದ ಸುನಿಲ್ ಕುಮಾರ್ ರವರು ತರಾತುರಿಯಲ್ಲಿ, ಸಚಿವರಾದ ಅಂಗಾರರ ಉಪಸ್ಥಿತಿಯಲ್ಲಿ ಗುದ್ದಲಿಪೂಜೆ ಮಾಡಿರುವುದನ್ನೇ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಬಿಂಬಿಸಲಾಗಿತ್ತು.
ಗ್ರಾಮ ಪಂಚಾಯತ್‌ನಿಂದ ಹಿಡಿದು ಲೋಕಸಭೆಯ ತನಕ ಆಡಳಿತ ನಡೆಸಿದ ಬಿಜೆಪಿ ನಾಯಕರಿಗೆ ಗುದ್ದಲಿಪೂಜೆ ಮಾಡುವ ಮೊದಲೇ ಕೆಲವು ಇಲಾಖಾ ಪ್ರಕ್ರಿಯೆಗಳು ಇವೆ ಎಂಬ ಕನಿಷ್ಟ ಜ್ಞಾನವೂ ಇಲ್ಲದಿರುವುದೇ ಈ ಕಾಮಗಾರಿ ವಿಳಂಬಕ್ಕೆ ಕಾರಣ. ಇಲಾಖಾ ಪ್ರಕ್ರಿಯೆ ಮುಗಿಯದೇ ಗುದ್ದಲಿಪೂಜೆ ಮಾಡುವ ಅವಶ್ಯಕತೆ ಇತ್ತೇ? ೨೦೨೩ ಜನವರಿ ೧೦ ರಂದು ಗುದ್ದಲಿ ಪೂಜೆ ಮಾಡಿದ ನಂತರ ಕಾಮಗಾರಿಯನ್ನು ಏಕೆ ಆರಂಭಿಸಲಿಲ್ಲ ಎಂದು ಪ್ರಶ್ನಿಸಬೇಕಾಗಿದೆ.
ಈಗಿನ ಸುಳ್ಯ ಶಾಸಕರು ಇಲಾಖಾ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಗುದ್ದಲಿ ಪೂಜೆ ಮಾಡುವ ಮೊದಲು ಇದನ್ನು ಆಲೋಚಿಸಬೇಕಾಗಿತ್ತು.
ಆದಷ್ಟು ಶೀಘ್ರವಾಗಿ ನೂತನ ಇಂಧನ ಸಚಿವರ ಮೂಲಕ ಇಲಾಖಾ ತಾಂತ್ರಿಕ ಅಡಚಣೆ ಇರುವುದನ್ನು ಸರಿಪಡಿಸಿಕೊಂಡು ಕಾಮಗಾರಿ ಆರಂಭವಾಗುವಂತೆ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಹಾಗೂ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್ ತಿಳಿಸಿದ್ದಾರೆ.