ಫೆ.26 – 28: ಅಡ್ಕಾರು ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದ ಕಾಲಾವಧಿ ಜಾತ್ರಾಮಹೋತ್ಸವ

0

ಗುಳಿಗದೈವಕ್ಕೆ ಕೋಲ ಸಮರ್ಪಣೆ ಮತ್ತು ಹನುಮ ನೇಮೋತ್ಸವ

ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದ ಕಾಲಾವಧಿ ಜಾತ್ರಾಮಹೋತ್ಸವವು ಬ್ರಹ್ಮಶ್ರೀ ವೇ. ಮೂ. ಪುರೋಹಿತ ನಾಗರಾಜ ಭಟ್ ಅವರ ಮಾರ್ಗದರ್ಶನದಲ್ಲಿ ಫೆ.26ರಿಂದ ಫೆ.28ರವರೆಗೆ ಜರುಗಲಿದೆ.

ಫೆ.26ರಂದು ಬೆಳಿಗ್ಗೆ ಸ್ಥಳಶುದ್ಧಿ, ಶುದ್ಧಿಕಲಶ, ಗಣಪತಿ ಹ‌ವನ, ಶ್ರೀ ನಾಗ ಸನ್ನಿಧಿಯಲ್ಲಿ ನಾಗತಂಬಿಲ ಜರುಗಲಿದೆ. ಬಳಿಕ ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರ, ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಭಜನಾ ಮಂದಿರ, ಅಡ್ಕಾರು ಅಯ್ಯಪ್ಪ ಮಂದಿರ, ಅರಿಯಡ್ಕ ಶ್ರೀ ದಾಲ್ಸೂರಾಯಿ ದೈವಸ್ಥಾನ, ಸೋಣಂಗೇರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನ, ಅಡ್ಕಾರು ಶ್ರೀ ಮಹಮ್ಮಾಯಿ ದೈವಸ್ಥಾನ, ಆಳಂಕಲ್ಯ ಶ್ರೀ ಧರ್ಮದೈವ ದೈವಸ್ಥಾನದಿಂದ ವಿವಿಧ ವಾಹನಗಳ ಮೆರವಣಿಗೆಯ ಮೂಲಕ ಹಸಿರುವಾಣಿಯು ಶ್ರೀ ಆಂಜನೇಯನ ಸನ್ನಿಧಿಗೆ ಸಮರ್ಪಣೆಗೊಂಡು ಉಗ್ರಾಣ ತುಂಬಿಸಲಾಗುವುದು. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ಜರುಗಲಿದ್ದು, ಸಂಜೆ ಗೆಜ್ಜೆಗಿರಿ ಯಕ್ಷಗಾನ ಮಂಡಳಿಯವರಿಂದ ‘ವಿಶ್ವ ವ್ಯಾಪಕನಾಮ ಶ್ರೀರಾಮ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಫೆ.27ರಂದು ಬೆಳಿಗ್ಗೆ ಶ್ರೀ ದೇವರಿಗೆ ಸೀಯಾಳ ಅಭಿಷೇಕ, ಪಂಚಾಮೃತ ಅಭಿಷೇಕ, ಪವಮಾನ ಅಭಿಷೇಕ ಜರುಗಲಿದೆ. ಬಳಿಕ ದೀಪ ಪ್ರತಿಷ್ಠೆಯಾಗಿ ವಿವಿಧ ಆಹ್ವಾನಿತ ಭಜನಾ ಸಂಘಗಳಿಂದ ಅಹ:ಪೂರ್ಣ ಭಜನೆ ಜರುಗಲಿದೆ.
ಪೂರ್ವಾಹ್ನ ಶ್ರೀ ಗುಳಿಗರಾಜ ಸನ್ನಿಧಿಯಲ್ಲಿ ದೇವಕ್ರಿಯಾ ತಂಬಿಲಸೇವೆ, ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಬ್ರಹ್ಮಸಂತರ್ಪಣೆ, ಅನ್ನದಾ‌ನ ಜರುಗಲಿದೆ. ಅಪರಾಹ್ನ ಪುತ್ತೂರಿನ ಇಳಂತಾಜೆ ತರವಾಡಿನಲ್ಲಿ ವೀಳ್ಯನೀಡಿ ಶ್ರೀ ಹನುಮದೈವದ ಭಂಡಾರ ತರಲಾಗುವುದು. ಸಾಯಂಕಾಲ ಭಜನಾ ಕಾರ್ಯಕ್ರಮದ ಮಂಗಳಂ , ಮಂಗಳವಾದ್ಯ , ವಾದನ ಸೇವೆ ಜರುಗಲಿದೆ. ರಾತ್ರಿ ಶ್ರೀ ಗುಳಿಗರಾಜ ದೈವದ ಭಂಡಾರ ತೆಗೆಯಲಾಗುವುದು. ಬಳಿಕ ಶ್ರೀ ಆಂಜನೇಯ ಸ್ವಾಮಿಯ ಅಂಗಣಪ್ರವೇಶ, ನೇಮೋತ್ಸವ, ಪ್ರಸಾದ ವಿರತಣೆ ಜರುಗಲಿದೆ. ರಾತ್ರಿ ಅನ್ನಸಂತರ್ಪಣೆ ಬಳಿಕ ಶ್ರೀ ದೇವರ ಅಲಂಕಾರ ಪೂಜೆ ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತಬಲಿ, ಕಟ್ಟೆಪೂಜೆ, ದರ್ಶನಬಲಿ, ಶ್ರೀ ಗುಳಿಗರಾಜ ದೈವದ ಕೋಲ, ದೈವ – ದೇವರ ಭೇಟಿ, ಬಟ್ಟಲು ಕಾಣಿಕೆ, ಶ್ರೀಮುಡಿ ಗಂಧಪ್ರಸಾದ ಜರುಗಲಿದೆ.
ಫೆ.28ರಂದು ಬೆಳಿಗ್ಗೆ ಶ್ರೀ ದೇವರಿಗೆ ನವಕ ಕಲಶಾಭಿಷೇಕ, ಎಳನೀರು ಅಭಿಷೇಕ, ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಸಂಪ್ರೋಕ್ಷಣೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ಜರುಗಲಿದೆ.